ತುಮಕೂರು: ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಕನ್ನಡ ಭವನ ನಿರ್ಮಾಣ ಹಾಗೂ ಆಯಾ ತಾಲ್ಲೂಕಿನ ಸಾಹಿತಿಗಳನ್ನು, ಅಜೀವ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಅವರೊಂದಿಗೆ ಚರ್ಚಿಸಿ ಸಮರ್ಥ ಹಾಗೂ ಸ್ವತಂತ್ರ್ಯ ಕಾರ್ಯ ನಿರ್ವಹಣೆಯ ತಾಲ್ಲೂಕು ಘಟಕಗಳ ರಚನೆ ಮಾಡುವ ಉದ್ಧೇಶ ಸೇರಿದಂತೆ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡುವ ಕನಸನ್ನು ಹೊಂದಿರುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ದೇವರಾಜ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 21 ರಂದು ನಡೆಯಲಿರುವ ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಕ್ರಮ ಸಂಖ್ಯೆ 2 ಸ್ಪರ್ಧೆ ಮಾಡಿದ್ದು, ತುರುವೇಕೆರೆ ತಾಲ್ಲೂಕು ಕಸಾಪ ಅಧ್ಯಕ್ಷನಾಗಿ ಹಲವಾರು ಸಾಹಿತ್ಯ ಕಾರ್ಯಕ್ರಮಗಳನ್ನು ಮಾಡಿ 10ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತುರುವೇಕೆರೆಯಲ್ಲಿ ಆಯೋಜಿಸಿ ರಾಜ್ಯಮಟ್ಟದ ನಾಟಕೋತ್ಸವಗಳು, ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು, ಪ್ರತಿಭಾನ್ವಿತ ಸಾಹಿತಿಗಳನ್ನು ನಮ್ಮ ಜಿಲ್ಲೆಗೆ ಕರೆತಂದು ಸಾಹಿತ್ಯ ಕೃಷಿಯಲ್ಲಿ ಸಾಕಷ್ಟು ತೊಡಗಿಸಿಕೊಂಡು, ಶಿಕ್ಷಕ ವೃತ್ತಿಯ ಜೊತೆಗೆ ಲಯನ್ಸ್ ಕ್ಲಬ್, ರೋಟರಿ ಮುಂತಾದ ಸಂಘ ಸಂಸ್ಥೆಗಳಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವಾ ಮನೋಭಾವದಿಂದ ಕೆಲಸ ಮಾಡಿದ್ದೇನೆ ಎಂದರು.
ಸಾಕಷ್ಟು ಕನಸುಗಳನ್ನು ಹೊತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು, ಮುಂದಿನ ಕೆಲವು ರೂಪುರೇಷೆಗಳನ್ನು ಮತ್ತು ಕಾರ್ಯಸೂಚಿಗಳನ್ನು ಸಿದ್ಧಪಡಿಸಿಕೊಂಡಿದ್ದು, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜ್ಯದಲ್ಲಿ ಮಾದರಿಯಾಗಿಸಬೇಕೆನ್ನುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.
ಮುಚ್ಚುತ್ತಿರುವ ಕನ್ನಡ ಶಾಲೆಗಳ ಬಗ್ಗೆ ಹೋರಾಟವನ್ನು ರೂಪಿಸುವುದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಕನ್ನಡ ಭವನ ನಿರ್ಮಾಣ ಮಾಡುವುದು, 69ನೇ ಸಾಹಿತ್ಯ ಸಮ್ಮೇಳನ ಹೊರತುಪಡಿಸಿದರೆ ತುಮಕೂರಿನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿಲ್ಲ, ಮತ್ತೆ ಎಲ್ಲರ ಸಹಕಾರದಿಂದ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕನಸು ಹೊಂದಿರುವುದಾಗಿ ತಿಳಿಸಿದರು.
ತುಮಕೂರಿನಲ್ಲಿ ಕಸಾಪ ಅಜೀವ ಸದಸ್ಯರ ಸಂಖ್ಯೆ ಕಡಿಮೆ ಇದೆ. ಅದಕ್ಕೆ ಅಜೀವ ಸದಸ್ಯರ ಅಭಿಯಾನದ ಮುಖಾಂತರ ಕನ್ನಡ ಸಾಹಿತ್ಯ ಪರಿಷತ್ತಿಗೆ ಏನು ಗುರುತರವಾದ ಜವಾಬ್ದಾರಿ ಇದೆ. ಏನು ಕೆಲಸ ಮಾಡುತ್ತಿದೆ ಎಂಬ ಅರಿವು ಪ್ರತಿಯೊಬ್ಬ ರಾಜ್ಯದ ಕನ್ನಡಿಗನಿಗೂ ಅರಿವಾಗಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ, ರಂಗಾಯಣ, ಜಾನಪದ ಲೋಕ ಹೀಗೆ ಸಾಂಸ್ಕøತಿಕವಾಗಿ ತುಮಕೂರನ್ನು ಹೆಚ್ಚು ಮೆರಗುಗೊಳಿಸಬೇಕು, ಯುವಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ, ಕನ್ನಡಾಭಿಮಾನಿಗಳಿಗೆ ಸಾಂಸ್ಕøತಿಕವಾಗಿ ಹೆಚ್ಚು ಒತ್ತು ಕೊಡಬೇಕೆಂಬುದು ನನ್ನ ಉದ್ಧೇಶವಾಗಿದೆ ಎಂದರು.
ಕ್ರ.ಸಂ.2ರಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಹಾಕುವ ಮೂಲಕ ಜಯಶೀಲನನ್ನಾಗಿ ಮಾಡಿ ತುಮಕೂರು ಜಿಲ್ಲೆಯ ಕನ್ನಡ ಸೇವೆಯನ್ನು ಮಾಡುವ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ಮಾತನಾಡಿ, 1994ರಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಸರ್ಕಾರಿ ನೌಕರರ ಸಂಘದಿಂದ 31 ಲಕ್ಷ ರೂ.ಗಳನ್ನು ಕನ್ನಡ ಸಾಹಿತ್ಯ ಭವನ ಕಟ್ಟಡ ನಿರ್ಮಾಣಕ್ಕಾಗಿ ದೇಣ ಗೆಯಾಗಿ ನೀಡಲಾಗಿತ್ತು.
ಅದೇ ರೀತಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಉತ್ತಮ ಅಭ್ಯರ್ಥಿಯಾದ ಎಸ್.ದೇವರಾಜ್ ಅವರನ್ನು ಆಯ್ಕೆ ಮಾಡುವ ಮೂಲಕ ಸಾಹಿತ್ಯ ಪರಿಷತ್ತನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯಲು ಸಹಕರಿಸಬೇಕೆಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್.ಪರಶಿವಮೂರ್ತಿ ಮಾತನಾಡಿ, ಇಡೀ ಜಿಲ್ಲೆಯ ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘ ಮತ್ತು ಸಾಹಿತ್ಯಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಸದಸ್ಯರು ನ.21 ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಹಾಗೂ ಶಿಕ್ಷಕರು, ಸಿಆರ್ಪಿಯಾಗಿ ಕೆಲಸ ಮಾಡುತ್ತಿರುವ ಎಸ್.ದೇವರಾಜು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತನ್ನು ಜಿಲ್ಲೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಟ್ಟುವ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಸಾಹಿತ್ಯ ಅಭಿಮಾನಿಗಳು, ಮತ್ತು ಕನ್ನಡಪರ ಕೆಲಸ ಮಾಡುವಂತಹವರು ಕನ್ನಡದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವಂತಹವರು ಅನೇಕ ಕನ್ನಡ ಕಾರ್ಯಕ್ರಮಗಳನ್ನು, ಅನೇಕ ಕಲಾವಿದರನ್ನು ಕರೆಸಿ ಅವರನ್ನು ಗೌರವಿಸುವಂತಹ ಕೆಲಸವನ್ನು ದೇವರಾಜ್ ಅವರು ಮಾಡಿದ್ದಾರೆ.
ಕಸಾಪ ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಅನೇಕ ದಾರವಾಹಿ ಕಲಾವಿದರನ್ನು ಕರೆಸಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ನಾಟಕೋತ್ಸವ, ಜಿಲ್ಲಾ ಕಸಾಪ ಸಮ್ಮೇಳನ ಮಾಡಿದ್ದು, ಉತ್ತಮ ಸಾಹಿತಿಗಳನ್ನು ಕರೆಸಿ ಗೌರವಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದ್ದಾರೆ. ಇಂತಹವರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಕಸಾಪಗೆ ಮತ್ತಷ್ಟು ಮೆರಗು ನೀಡಲು ಮತದಾರರು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ, ಕಾರ್ಯದರ್ಶಿ ಜಗದೀಶ್, ಚಿಕ್ಕಣ್ಣ, ಉಪಾಧ್ಯಕ್ಷರುಗಳಾದ ರೇಣುಕಾರಾಧ್ಯ, ಮಂಜಣ್ಣ, ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಉಮಾಶಂಕರ್ (ಕೆ.ಉಮೇಶ್) ಸೇರಿದಂತೆ ವಿವಿಧ ಕನ್ನಡಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.