ತುಮಕೂರು: ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಸಂಚರಿಸಲು ಅವಕಾಶವಿರುವ ಓಲಾ-ಉಬರ್ ಟ್ಯಾಕ್ಸಿಗಳು ತುಮಕೂರು ನಗರದಲ್ಲಿ ಅನಧಿಕೃತವಾಗಿ ಬಾಡಿಗೆ ಹೊಡೆಯುತ್ತಿರುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ನಂತರ ಮಾತನಾಡಿದ ಜಯಕರ್ನಾಟಕ ವಾಹನ ಚಾಲಕರ ಘಟಕದ ಜಿಲ್ಲಾಧ್ಯಕ್ಷ ಟಿ.ಎಂ.ಪ್ರತಾಪ್ಕುಮಾರ್ ಅವರು, ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರಿಗೆ ಬೆಳಿಗ್ಗೆ ಸಮಯದಲ್ಲಿ ಬಾಡಿಗೆ ನಡೆಸುತ್ತಿದ್ದು, ಇದರಿಂದ ತುಮಕೂರು ನಗರದಲ್ಲಿರುವ ವಾಹನಗಳ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಓಲಾ-ಉಬರ್ ಕ್ಯಾಬ್ಗಳು ಸಿಟಿ ಟ್ಯಾಕ್ಸಿಗಳಾಗಿದ್ದು, ಅನಧಿಕೃತವಾಗಿ ಅಕ್ಕಪಕ್ಕದ ಜಿಲ್ಲೆಗಳಿಗೆ ತೆರಳಿ ಅನಧಿಕೃತವಾಗಿ ಬಾಡಿಗೆ ವ್ಯವಹಾರವನ್ನು ನಡೆಸುತ್ತಿದ್ದಾರೆ.
ತುಮಕೂರು ನಗರದಲ್ಲಿ 1000ಕ್ಕೂ ಹೆಚ್ಚು ಟೂರಿಸ್ಟ್ ವಾಹನಗಳು ಇದ್ದು, ಬಾಡಿಗೆ ಇಲ್ಲದೇ ಮಾಲೀಕರು ಮತ್ತು ಚಾಲಕರ ಕುಟುಂಬಗಳು ದಯನೀಯ ಪರಿಸ್ಥಿತಿಯನ್ನು ಎದುರಿಸುವಂತಾಗಿದ್ದು, ತುಮಕೂರು ನಗರದಿಂದ ಕಾರ್ಯನಿರ್ವಹಿಸುತ್ತಿರುವ ಓಲಾ ಮತ್ತು ಉಬರ್ ಸಿಟಿಕ್ಯಾಬ್ಗಳಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಅಳಲು ತೋಡಿಕೊಂಡರು.
ದಿನನಿತ್ಯ ಬೆಂಗಳೂರಿಗೆ ನೂರಾರು ತುಮಕೂರಿನ ವಾಹನಗಳು ಬಾಡಿಗೆಗೆ ಹೋಗುತ್ತಿದ್ದು, ಇದರಿಂದಾಗಿ ಟೂರಿಸ್ಟ್ ವಾಹನಗಳ ಮಾಲೀಕರು ಮತ್ತು ಚಾಲಕರು ಅವರ ಕುಟುಂಬಗಳು ಜೀವನ ನಡೆಸುತ್ತಿದ್ದವು, ಈಗ ಓಲಾ-ಉಬರ್ ಸಿಟಿ ಟ್ಯಾಕ್ಸಿಗಳಿಂದಾಗಿ ತುಮಕೂರು ನಗರದ ವಾಹನಗಳಿಗೆ ಬಾಡಿಗೆ ಕಡಿಮೆಯಾಗಿದ್ದು, ಈಗ ಬೆರಳಣ ಯಷ್ಟು ಓಲಾ-ಉಬರ್ ಸಿಟಿ ಟ್ಯಾಕ್ಸಿಗಳು ಕಾರ್ಯ ಚಟುವಟಿಕೆ ಮಾಡುತ್ತಿದ್ದು, ಇವುಗಳಿಗೆ ನಿಯಂತ್ರಣ ಹಾಕದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್, ಸಂಘಟನಾ ಕಾರ್ಯದರ್ಶಿ ಸೋಮಶೇಖರ್, ಕಾರ್ಯದರ್ಶಿ ರಘು, ಸಂಚಾಲಕ ಜಯಶಂಕರ್, ರಂಜನ್, ಪೃಥ್ವಿ, ಯಶು, ಶರತ್, ವರುಣ್, ನರಸಿಂಹ, ನಿತೀಶ್ ಮುತಾಂದವರು ಉಪಸ್ಥಿತರಿದ್ದರು.

