ತುಮಕೂರು: ಉಪವಾಸವು ಮನುಷ್ಯನಲ್ಲಿ ಮಾನವೀಯತೆಯ ಗುಣವನ್ನು ಬೆಳೆಸುವುದರ ಜೊತೆಗೆ ವ್ಯಕ್ತಿಯನ್ನು ಧರ್ಮನಿಷ್ಠನನ್ನಾಗಿಸುತ್ತದೆ ಎಂದು ಜಮಾತ್-ಎ-ಇಸ್ಲಾಮಿ ಹಿಂದ್ ರಾಜ್ಯ ಸಹ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.ನಗರದ ಖಾಸಗಿ ಹೋಟೆಲ್ನಲ್ಲಿ ಜಮಾತ್-ಎ-ಇಸ್ಲಾಮಿ ಹಿಂದ್ ತುಮಕೂರು ಘಟಕದ ವತಿಯಿಂದ ಆಯೋಜಿಸಲಾದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.ರಂಜಾನ್ ತಿಂಗಳಲ್ಲಿ ಆಚರಿಸುವ ಉಪವಾಸವು ಆತ್ಮಶುದ್ಧಿ, ಸಹಾನುಭೂತಿ ಹಾಗೂ ಸಹೋದರತ್ವದ ಮೌಲ್ಯಗಳನ್ನು ವ್ಯಕ್ತಿಯಲ್ಲಿ ಬೆಳೆಸುತ್ತದೆ.

ಇಂತಹ ಸೌಹಾರ್ದ ಕಾರ್ಯಕ್ರಮಗಳು ಸಮಾಜದ ವಿವಿಧ ಸಮುದಾಯಗಳ ನಡುವೆ ಪರಸ್ಪರ ಗೌರವ ಮತ್ತು ಒಗ್ಗಟ್ಟನ್ನು ವೃದ್ಧಿಸಲು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಹಾಗೂ ಜನರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಇಂತಹ ಸೌಹಾರ್ದ ಇಫ್ತಾರ್ ಕೂಟಗಳು ಸಮಾಜದಲ್ಲಿ ಶಾಂತಿ, ಒಗ್ಗಟ್ಟು ಮತ್ತು ಸಹಬಾಳ್ವೆಯ ಸಂದೇಶವನ್ನು ಬಲಪಡಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಇಂತಹ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಯುವುದರಿಂದ ಕೋಮು ವೈಷಮ್ಯಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಜೆ.ಐ.ಹೆಚ್ ತುಮಕೂರು ಸ್ಥಾನೀಯ ಅಧ್ಯಕ್ಷ ಮೌಲಾನಾ ಅಸ್ರಾರ್ ಉಮ್ರಿ, ಪ್ರಗತಿಪರ ಮುಖಂಡ ನಿತ್ರಾಹಳ್ಳಿ ಸುಬ್ಬರಾಮಯ್ಯ, ಡಿಎಸ್ಎಸ್ ಮುಖಂಡ ಪಿ.ಎನ್. ರಾಮಯ್ಯ, ಎಂ.ಎ.ಎಂ.ಎಸ್ ಪ್ರಾಂಶುಪಾಲ ಹರೀಶ್ ಕುಮಾರ್, ಜಿ.ಎಲ್ ನಟರಾಜು, ವಕೀಲ ಕೃಷ್ಣಪ್ಪ, ಉದ್ಯಮಿ ಹಾನಿ ಹುಸೈನ್, ತಾಜುದ್ದೀನ್ ಶರೀಫ್, ಇಮಾಂ ಬೇಗ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
